== ಸ್ಥಳ == ಶ್ರೀ ಮುನಿಸುವೃತನಾಥಸ್ವಾಮಿ ಬಸದಿಯು ಉಡುಪಿ ತಾಲೂಕು ನಡ್ಡಾಲು ಗ್ರಾಮದ ಪಡುಬಿದ್ರಿ ಎಂಬ ಊರಿನಲ್ಲಿದೆ. == ಮಾರ್ಗ == ಶ್ರೀ ಮುನಿಸುವೃತನಾಥಸ್ವಾಮಿ ಬಸದಿಯು ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಮಂಗಳೂರಿನಿಂದ ೩೫ ಕಿ. ಮೀ. ಉತ್ತರಕ್ಕೆ ಹಾಗೂ ಉಡುಪಿಯಿಂದ ೨೫ ಕಿ.ಮೀ. ದಕ್ಷಿಣಕ್ಕೆ ಇದೆ.ಬಸದಿಯ ಪಶ್ಚಿಮಕ್ಕೆ ಜಿಲ್ಲಾ ಉಡುಪಿ ತಾಲೂಕು ನಡ್ಡಾಲು ಗ್ರಾಮದ ಪಂಚಾಯಿತಿ ಮಾರ್ಗ. ಈ ಬಸದಿಯ ಉತ್ತರಕ್ಕೆ ೫ ಕಿ.ಮೀ. ದೂರದ ಎರ್ಮಾಳಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಶ್ರೀ ಚಂದ್ರನಾಥಸ್ವಾಮಿ ಬಸದಿ, ಪೂರ್ವಕ್ಕೆ ೪ ಕಿ.ಮೀ. ದೂರದ ನಂದಿಕೂರಿನಲ್ಲಿ ಶ್ರೀ ಆದಿನಾಥಸ್ವಾಮಿ ಬಸದಿ ಇದೆ. == ಇತಿಹಾಸ == ಬಸದಿಯನ್ನು ಗೇರುಸೊಪ್ಪೆಯ ಮಹಾಮಂಡಲೇಶ್ವರ ಚೆನ್ನಭೈರಾದೇವಿಯಮ್ಮನವರು ಕ್ರಿ.ಶ. ೧೫೭೨ರಲ್ಲಿ ಕಟ್ಟಿಸಿದ್ದರೆಂದು ಇದರ ಜೀರ್ಣೋದ್ದಾರದ ಸಂದರ್ಭ ದೊರೆತ ತಾಮ್ರ ಶಾಸನದಿಂದ ತಿಳಿಯುತ್ತದೆ. ಈ ಬಸದಿಯು ಬಹುಪ್ರಾಚೀನವಾದುದು ಹಾಗೂ ಮೇಗಿನ ನೆಲೆಯೊಂದಿಗೆ ಬೃಹತ್ತಾದುದು, ಇದನ್ನು ಗೇರುಸೊಪ್ಪೆಯ ಮಹಾಮಂಡಲೇಶ್ವರ ರಾಣಿ ಚೆನ್ನಭೈರಾದೇವಿಯಮನವರ ಆಪ್ಪಣೆ ಮೇರೆಗೆ ಪಡುಬಿದ್ರಿಯ ಮಹಾಲಿಂಗಾದಿಯಾಗಿ ಕಿನ್ನರ ಹೆಗ್ಗಡೆ ಮತ್ತು ಸಮಸ್ತ ಹಲರ ಸನ್ನತಿಯಿಂದ ಕ್ರಿ.ಶ. ೧೫೭೨ರಲ್ಲಿ ಕಟ್ಟಿಸಿದರೆಂದು ವಾಡಿಕೆಯಲ್ಲಿ ಹೇಳಲಾಗುತ್ತದೆ. ಜತೆಗೆ ಒಂದು ತಾಮ್ರ ಶಾಸನವೂ ಇದನ್ನೇ ಹೇಳುತ್ತದೆ. == ಒಳಾಂಗಣ ಶಿಲಾನ್ಯಾಸ == ಬಸದಿಯಲ್ಲಿ ಅಶ್ವಾರೂಢ ರಾದ ಬ್ರಹ್ಮದೇವರ ಮತ್ತು ಪದಪೀಠದ ಮೇಲೆ ನಿಂತು ಕೊಂಡಿರುವ ಶ್ರೀ ಪದ್ಮಾವತೀ ಅಮ್ಮನವರ ಮೂರ್ತಿಗಳಿವೆ. ಈ ಎರಡು ಸುಂದರ ಮೂರ್ತಿಗಳಿಗೆ ಮೇಲೆ ಸತಿಗೆ (ಛತ್ರ) ಯೊಂದಿಗೆ ಕಂಚಿನ ಪ್ರಭಾವಳಿಯನ್ನು ಜೋಡಿಸಿ ಚಂದಗೊಳಿಸಲಾಗಿದೆ. ಬಸದಿಯ ಬಳಿಯಲ್ಲಿ ಎರಡು ಪಾರಿಜಾತ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಬಸದಿಯನ್ನು ಪ್ರವೇಶಿಸುವಾಗ ಎಡಬಲ ಬದಿಗಳಲ್ಲಿ ಗೋಪುರ ಇದೆ. ಬಸದಿಯ ಎದುರಿನ ಪ್ರಾರ್ಥನಾ ಮಂಟಪಕ್ಕೆ ಹತ್ತುವಲ್ಲಿ ಗೋಡೆಯಲ್ಲಿ ದ್ವಾರಪಾಲಕರ ಚಿತ್ರಗಳಿವೆ. ಅಲ್ಲಿ ಬೇರೆ ಚಿತ್ರಗಳು ಇಲ್ಲ. ತೀರ್ಥಂಕರ ಸ್ವಾಮಿಯ ಬಳಿಗೆ ಹೋಗುವಾಗ ಸಿಗುವ ಮಂಟಪವನ್ನು ಘಂಟಾ ಮಂಟಪವೆಂದು ಕರೆಯುತ್ತಾರೆ. ಗಂಧ ಕುಟಿಯು ತೀರ್ಥಂಕರ ಮಂಟಪದಲ್ಲಿ ಇಲ್ಲ. ಇನ್ನೊಂದು ಮಂಟಪದಲ್ಲಿದೆ ಅದನ್ನು ಪ್ರಾಸಾದ ಮಂಟಪ ಎಂದು ಕರೆಯುತ್ತಾರೆ. ಗಂಧಕುಟಿಯ ಬಳಿಯಲ್ಲಿ ಗಣಧರರ ಪಾದ, ಶ್ರುತ, ಬ್ರಹ್ಮದೇವರು ಇತ್ಯಾದಿ ಮೂರ್ತಿಗಳಿವೆ.ಮಹಾ ಮಾತೆ ಪದ್ಮಾವತೀ ದೇವಿಯ ಉತ್ತಿಷ್ಣ ಮೂರ್ತಿಗೆ ಸೀರೆ ಉಡಿಸಿ, ಬಳೆಗಳನ್ನು ಹಾಕಿ ಹೂವಿನಿಂದ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ. ಈ ಅಮ್ಮನವರ ಮೂರ್ತಿ ಉತ್ತರಕ್ಕೆ ಮುಖ ಮಾಡಿ, ಅಮ್ಮನವರ ಕಾಲಿನ ಬಳಿಯಲ್ಲಿ ಕುಕ್ಕುಟ ಸರ್ಪ ಇದೆ. ಮೂಲಸ್ವಾಮಿಯ ಮೂರ್ತಿ ಸ್ವಚ್ಚ ಅಮೃತಶಿಲೆಯದು, ಹಂಸಗಳು, ಪುಷ್ಪದಳಗಳು, ಕೀರ್ತಿಮುಖ ಮತ್ತು ಮುಕೋಡೆಗಳಿರುವ ಲೋಹದ ಪ್ರಭಾವಳಿಯನ್ನು ಜೋಡಿಸಲಾಗಿದೆ. ಸ್ವಾಮಿಯ ಧ್ಯಾನಾಸಕ್ಕೆ ಪ್ರಸನ್ನ ಮುಖಮುದ್ರೆಯು ಬಹು ಆಕರ್ಷಕವಾಗಿದ್ದು, ಎತ್ತರ ೨೭ ಇಂಚು, ಪದ್ಮಾಸನ ಭಂಗಿಯಲ್ಲಿ ಇದೆ. == ಹೊರಾಂಗಣ == ಬಸದಿಯ ಅಂಗಳದ ಬಲಮೂಲೆಯಲ್ಲಿ ಶ್ರೀ ಕ್ಷೇತ್ರಪಾಲನ ಸನ್ನಿಧಿ ಇದೆ. ಅಲ್ಲಿ ಕ್ಷೇತ್ರಪಾಲ ಮತ್ತು ನಾಗರಕಲ್ಲು ಇದೆ. ಶಿಲಾಶಾಸನಗಳಿಲ್ಲ, ಅಷ್ಟದಿಕ್ಷಾಲಕರ ಕಲ್ಲು ಇದೆ, ಬಸದಿಯ ಸುತ್ತಲೂ ಪ್ರಾಕಾರ ಗೋಡೆ ಇದೆ. ಅದು ಮುರಕಲ್ಲಿನಿಂದ ನಿರ್ಮಿತವಾಗಿದೆ. == ಪೂಜಾ ವಿಧಾನ == ದಿನವೂ ಮೂಲಾಮಿಗೆ ಮೂರ್ತಿಗಳಿಗೆ ಕ್ಷೀರಾಭಿಷೇಕ ಮಾಡಲಾಗುತ್ತದೆ. ಶನಿ ಗ್ರಹದೋಷ ಪರಿಹಾರಕ್ಕಾಗಿ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ವಸುಧಾರೆ ಪೂಜೆಗಳನ್ನು ನೆರವೇರಿಸಲಾಗುತ್ತದೆ. ಪ್ರಾರ್ಥಿಸಿಕೊಂಡು ಬಂದ ಎಲ್ಲಾ ಧರ್ಮದವರಿಗೂ ತೀರ್ಥವನ್ನು ನೆರವೇರಿಸುತ್ತಾರೆ. ಬಸದಿಯಲ್ಲಿ ಬೆಳಿಗ್ಗೆ ಮತ್ತು ಸಾಯಂಕಾಲ ಪೂಜೆ ನಡೆಯುತ್ತದೆ. ಬಸದಿಯಲ್ಲಿ ಜೈನ ಹಬ್ಬಗಳನ್ನು ಆಚರಿಸಲಾಗುತ್ತದೆ. == ಉಲ್ಲೇಖಗಳು ==